
ಬೆಳಗಾವಿ: ರಾಜ್ಯ ಬಿಜೆಪಿಯಲ್ಲಿ ಬಣ ರಾಜಕೀಯ ಮತ್ತೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ನಿಮ್ಮಪ್ಪನ ಮುಖ್ಯಮಂತ್ರಿ ಮಾಡಲು ನಾನು ಶಾಸಕ ಸ್ಥಾನ ತ್ಯಾಗ ಮಾಡಿದ್ದೆ ಎಂದು ಶನಿವಾರ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರು ನಾಲಿಗೆ ಬಿಗಿ ಹಿಡಿದು ಮಾತಾಡಿ ಎಂದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ತಿರುಗೇಟು ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಅಂಕಲಗಿ ಗ್ರಾಮದಲ್ಲಿ ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತಾಡಿದ ರಮೇಶ್ ಜಾರಕಿಹೊಳಿ, ನಾನು ನಿಮ್ಮಪ್ಪನ್ನೇ ಸಿಎಂ ಮಾಡೋದಕ್ಕೆ ಬಿಜೆಪಿಗೆ ಬಂದಿದ್ದು ವಿಜಯೇಂದ್ರಾ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ವಿಜಯೇಂದ್ರ ನೀನು ಇನ್ನೂ ಬಚ್ಚಾ ಇದ್ದೀಯಾ ರಾಜ್ಯಾಧ್ಯಕ್ಷ ಆಗೋದಕ್ಕೆ ನೀನಗೆ ಯೋಗ್ಯತೆಯಿಲ್ಲ. ಯಡಿಯೂರಪ್ಪ ಬಗ್ಗೆ ನನಗೆ ಈಗಲೂ ಗೌರವವಿದೆ. ಅಗೌರವದಿಂದ ಮಾತನಾಡಿಲ್ಲ. ಈಗಲೂ ಯಡಿಯೂರಪ್ಪ ನಮ್ಮ ನಾಯಕರಿದ್ದಾರೆ ಎಂದರು.
ವಿಜಯೇಂದ್ರ ನೀನೆ ಡೇಟ್ ಫಿಕ್ಸ್ ಮಾಡು, ನಾನು ಶಿಕಾರಿಪುರದಲ್ಲಿ ನಿಮ್ಮ ಮನೆ ಮುಂದಿನಿಂದಲೇ ರಾಜ್ಯ ಪ್ರವಾಸ ಶುರುಮಾಡುತ್ತೇನೆ. ನಿನ್ನ ಸವಾಲನ್ನು ನಾನು ಸ್ವೀಕಾರ ಮಾಡಿರುವೆ, ನಾನು ಬರುವಾಗ ಪೊಲೀಸರು, ಗನ್ ಮ್ಯಾನ್ ತರಲ್ಲ, ಒಬ್ಬನೆ ಬರ್ತೇನೆ. ತಾಕತ್ತಿದ್ದರೆ ತಡಿ ನೋಡೋಣ ಎನ್ನುವ ಮೂಲಕ ಮುಂದಿನ ತಿನಗಳಲ್ಲಿ ರಮೇಶ್ ಜಾರಕಿಹೊಳಿಯವರಿಗೆ ಓಡಾಡಲು ಕಷ್ಟವಾಗುತ್ತದೆ ಎಂದಿದ್ದ ವಿಜಯೇಂದ್ರಾಗೆ ಸವಾಲು ಹಾಕಿದರು.