Home ಸ್ಥಳೀಯ ಐತಿಹಾಸಿಕ ಕಾದಂಬರಿ ಕಷ್ಟದ ಕೆಲಸ; ಕಳಸಣ್ಣವರ ಸಾಹಿತ್ಯ ಸಾಹಸ ಶ್ಲಾಘನೀಯ: ಕಲ್ಮಠ ಶ್ರೀಗಳು

ಐತಿಹಾಸಿಕ ಕಾದಂಬರಿ ಕಷ್ಟದ ಕೆಲಸ; ಕಳಸಣ್ಣವರ ಸಾಹಿತ್ಯ ಸಾಹಸ ಶ್ಲಾಘನೀಯ: ಕಲ್ಮಠ ಶ್ರೀಗಳು

0
ಐತಿಹಾಸಿಕ ಕಾದಂಬರಿ ಕಷ್ಟದ ಕೆಲಸ; ಕಳಸಣ್ಣವರ ಸಾಹಿತ್ಯ ಸಾಹಸ ಶ್ಲಾಘನೀಯ: ಕಲ್ಮಠ ಶ್ರೀಗಳು

ಚನ್ನಮ್ಮನ ಕಿತ್ತೂರು, ಅಕ್ಟೊಬರ್ 23: ಸೃಜನಶೀಲ ಕಾದಂಬರಿಗಿಂತಲೂ ಸಂಶೋಧನಾತ್ಮಕ ಕಾದಂಬರಿ ರಚಿಸುವುದು ತುಂಬ ಕಷ್ಟದ ಕೆಲಸ ಹೀಗಾಗಿ ಮಂಜುನಾಥ ಕಳಸಣ್ಣವರ ಅವರು ಏಳು ವರ್ಷಗಳ ಕಾಲ ಹಂತ ಹಂತವಾಗಿ ಸಂಶೋಧನೆಗಳನ್ನು ಕೈಗೊಳ್ಳುವ ಮೂಲಕ ‘ಗಂಡು ಮೆಟ್ಟಿನ ರಾಣಿ ಗಟ್ಟಿಗಿತ್ತಿ ಚನ್ನಮ್ಮ’ ಎಂಬ ಈ ಸಂಶೋಧನಾತ್ಮಕ ಕಾದಂಬರಿ ರೂಪುಗೊಂಡಿದೆ ಎಂದು ಕಲ್ಮಠದ ಪೂಜ್ಯ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ಕಿತ್ತೂರು ಕಲ್ಮಠದಲ್ಲಿ ಸಾಹಿತಿ ಮಂಜುನಾಥ ಕಳಸಣ್ಣವರ ಅವರು ರಚಿಸಿರುವ ಗಂಡುಮೆಟ್ಟಿನ ರಾಣಿ ಕಾದಂಬರಿಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಸೃಜನಶೀಲ ಬರವಣಿಗೆ ಮತ್ತು ಸೃಜನೇತರ ಬರವಣಿಗೆಗೂ ಸಾಕಷ್ಟು ವ್ಯತ್ಯಾಸಗಳಿವೆ ಕಲ್ಪನಾತೀತ ನೈಜ ಐತಿಹಾಸಿಕ ಘಟನೆಗಳನ್ನು ಆಧರಿಸಿ ಸ್ಥಳೀಯ ಅಧ್ಯಯನದ ಮೂಲಕ ರೂಪುಗೊಂಡ ಕಾದಂಬರಿಗಳು ಬಹಳ ಕಾಲ ಗಟ್ಟಿಯಾಗಿ ನಿಲ್ಲಬಲ್ಲವು ಅಂತವುಗಳ ಸಾಲಲ್ಲಿ ಈ ಕಾದಂಬರಿ ನಿಲ್ಲಲಿದೆ. 200ನೇ ವರ್ಷದ ವಿಜಯೋತ್ಸವದ ಈ ಸಂಭ್ರಮದಲ್ಲಿ ಇಡೀ ವರ್ಷಪೂರ್ತಿ ಈ ರೀತಿಯ ಸಾಹಿತ್ಯಿಕ ಚರ್ಚೆ, ಗೋಷ್ಠಿ, ವಿಚಾರ ಸಂಕಿರಣಗಳನ್ನು ಆಯೋಜಿಸುವ ಯೋಜನೆಯನ್ನು ರೂಪಿಸಿ ರಾಣಿ ಚನ್ನಮ್ಮನವರ ಐತಿಹಾಸಿಕ ಮಹತ್ವವನ್ನು ಪ್ರಚುರಪಡಿಸುವ ಕೆಲಸ ಕೈಗೊಳ್ಳಲಾಗುವುದು ಎಂದರು.

ಐತಿಹಾಸಿಕ ಸಂಶೋಧನೆಗಳಿಗೆ ಪೂರಕವಾಗಿ ಈಗಾಗಲೇ ಹಲವಾರು ಕಾದಂಬರಿಗಳು ರಾಣಿ ಚನ್ನಮ್ಮನವರ ಕುರಿತು ರಚಿತಗೊಂಡಿದ್ದರೂ ಉದ್ದೇಶಪೂರ್ವಕ ಕೆಲ ವ್ಯಕ್ತಿಗಳನ್ನು ಕೆಲ ಘಟನೆಗಳನ್ನು ಇತಿಹಾಸದ ಪುಟಗಳಿಂದ ಮರೆ ಮಾಚುವ ಜಾಣ ಕುರುಡತನ ಪ್ರದರ್ಶಿಸಿದ ಲೇಖಕರ ನಡುವೆ ಗಟ್ಟಿಯಾದ ಮತ್ತು ನೈಜ ಐತಿಹಾಸಿಕ ಚಾರಿತ್ರಿಕ ಘಟನೆಗಳನ್ನು ಈ ಕೃತಿಯಲ್ಲಿ ದಾಖಲಿಸಿರುವುದು ಶ್ಲಾಘನೀಯ. ಸಾಹಿತ್ಯಾಸಕ್ತರಿಗೆ ಇದೊಂದು ಅಪರೂಪದ ಕೃತಿಯಾಗಲಿದೆ ಎಂದು ಇತಿಹಾಸ ಸಂಶೋಧಕ ಮಹೇಶ ಚನ್ನಂಗಿ ಅಭಿಪ್ರಾಯಪಟ್ಟರು.

ಶಿಕ್ಷಣ ಇಲಾಖೆಯಲ್ಲಿ ಹಲವಾರು ಪ್ರತಿಭೆಗಳಿದ್ದರೂ ಸೂಕ್ತ ವೇದಿಕೆ ದೊರೆಯದೇ ಇರುವುದರಿಂದ ಪ್ರತಿಭೆಗಳು ಅವಕಾಶ ವಂಚಿತರಾಗುತ್ತಿದ್ದಾರೆ ಈ ನಿಟ್ಟಿನಲ್ಲಿ ಕಲ್ಮಠದ ಶ್ರೀಗಳು ಸದಾ ಕ್ರಿಯಾಶೀಲರಾಗಿ ಮಾರ್ಗದರ್ಶನ ಮಾಡುತ್ತ ಕಲೆ, ಸಾಹಿತ್ಯಕ್ಕೆ ಪೂರಕವಾಗಿ ನಿಂತಿರುವುದಕ್ಕೆ ಈ ಕೃತಿ ಮಹತ್ವದ ಉದಾಹರಣೆಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ವೈ.ತುಬಾಕಿ ಹೇಳಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಮೆಹಬೂಬ್ ಮುಲ್ತಾನಿ ಅವರು ಕೃತಿ ರಚನೆಯ ಹಿಂದಿನ ಅನೇಕ ಸಂಕಷ್ಟಗಳನ್ನು ನೆನಪಿಸಿಕೊಂಡು ಲೇಖಕರ ಶ್ರಮದ ಬಗ್ಗೆ ಸಂಕ್ಷಿಪ್ತವಾಗಿ ಶ್ಲಾಘಿಸಿದರು.

ಲೇಖಕ ಮಂಜುನಾಥ ಕಳಸಣ್ಣವರ ಮಾತನಾಡಿ ನನ್ನ ನೆಲದ ಬಗ್ಗೆ ಇರುವ ಅಪಾರ ಸ್ವಾಭಿಮಾನದ ಪ್ರತಿಫಲವೇ ಈ ಕಾದಂಬರಿಯಾಗಿದೆ. ಯಾವುದೋ ಒಂದು ಎಳೆಯ ಬೆನ್ನತ್ತಿ ಸಮಗ್ರ ಕಿತ್ತೂರು ಇತಿಹಾಸವನ್ನು ಪುನರ್ಮನನ ಮಾಡಿಕೊಂಡು ಏಳು ವರ್ಷಗಳ ಕಾಲ ಅನೇಕ ವಿಚಾರಗೋಷ್ಠಿಗಳು, ಮಹತ್ವದ ಕೃತಿಗಳನ್ನು ಅವಲೋಕಿಸಿ ದಾಖಲಾರ್ಹ ಸಂಗತಿಗಳಾಚೆಯೂ ಇರುವ ನೈಜ ಸಂಗತಿಗಳನ್ನು ಕಾದಂಬರಿ ರೂಪದಲ್ಲಿ ಈ ಕೃತಿಯಲ್ಲಿ ಹಿಡಿದಿಡಲಾಗಿದೆ. ಓದುಗರು ಸ್ವಾಗತಿಸಿ ಪುಸ್ತಕದ ಬಗ್ಗೆ ನಾಲ್ಕು ಮಾತುಗಳನ್ನಾಡಿದಾಗ ಲೇಖಕರ ಶ್ರಮ ಸಾರ್ಥಕವಾಗುತ್ತದೆ ಎಂದರು.

ಸಾಹಿತಿ ತಾನೂ ಬೆಳೆದು ಇತರರನ್ನೂ ಬೆಳೆಸುವುದು ವಾಡಿಕೆ ಆ ನಿಟ್ಟಿನಲ್ಲಿ ಸ್ಥಳೀಯ ಸಾಹಿತಿಗಳ ಕೃತಿಗಳನ್ನು ಕೊಂಡು ಓದುವ ಮೂಲಕ ಪುಸ್ತಕ ಸಂಸ್ಕೃತಿ ಉಳಿಸಬೇಕಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಎಸ್.ಬಿ.ದಳವಾಯಿ ಹೇಳಿದರು.

ಭುವನಾ ಹಿರೇಮಠ ಪ್ರಾರ್ಥನಾ ಗೀತೆ ಮತ್ತು ಲಾವಣಿ ಪದ್ಯ ಹಾಡಿದರು.ಶಿಕ್ಷಕರಾದ ಬಿದರಿ ನಿರೂಪಿಸಿದರು.

ಸಹಾಯಕ ಕ್ಯೂರೇಟರ್ ರಾಘವೇಂದ್ರ, ಸಂತೋಷ ಹಾನಗಲ್ಲ, ಬಸವರಾಜ ಕುಪ್ಪಸಗೌಡರ, ಜಯರಾಮ ಕಾದ್ರೊಳ್ಳಿ,ವಿನೋದ ಪಾಟೀಲ, ಸಿದ್ದರಾಮ ತಳವಾರ ಇತರರು ಉಪಸ್ಥಿತರಿದ್ದರು. ಲೇಖಕ ಮಂಜುನಾಥ ಕಳಸಣ್ಣವರ ಅವರನ್ನು ಕಲ್ಮಠದ ಶ್ರೀಗಳು ಸತ್ಕರಿಸಿದರು.

LEAVE A REPLY

Please enter your comment!
Please enter your name here