
ಚನ್ನಮ್ಮನ ಕಿತ್ತೂರು,ಅಕ್ಟೋಬರ್ 06: ಐತಿಹಾಸಿಕ ವೀರರಾಣಿ ಚನ್ನಮ್ಮಾಜಿ ಕಿತ್ತೂರು ಉತ್ಸವದ 200ನೇ ವರ್ಷದ ವಿಜಯೋತ್ಸವ ಅಂಗವಾಗಿ ಅ.23 ರಿಂದ 25 ರಿ ವರೆಗೆ ಜರುಗಲಿರುವ ಕಿತ್ತೂರು ಉತ್ಸವ-2024 ಸಂಭ್ರಮಾಚರಣೆ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆಗಳನ್ನು ಪರಿಶೀಲಿಸಿದ ಶಾಸಕ ಬಾಬಾಸಾಹೇಬ ಪಾಟೀಲ ಕಿತ್ತೂರು ಕೋಟೆ ಆವರಣಕ್ಕೆ ಶನಿವಾರ ಭೇಟಿ ನೀಡಿದರು.
ಕೋಟೆ ಆವರಣದ ಸ್ವಚ್ಛತಾ ಕಾರ್ಯ ಪರಿಶೀಲಿಸಿದಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ ಈಗಾಗಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಿತ್ತೂರು ಉತ್ಸವದ ವಿವಿಧ ಉಪಸಮಿತಿಗಳ ಸಭೆ ನಡೆಸಿ ಉತ್ಸವದ ಸಿದ್ಧತೆಗಳನ್ನು ಮಾಡುತ್ತಿದ್ದಾರೆ. ಉತ್ಸವಕ್ಕೆ ಬರುವ ಎಲ್ಲ ಜನರಿಗೂ ಅಗತ್ಯ ಸೌಕರ್ಯ ಒದಗಿಸಿ, ರಾಷ್ಟ್ರೀಯ ಹೆದ್ದಾರಿ ಪಕ್ಕದ ರಾಣಿ ಚನ್ನಮ್ಮಾಜಿ ಪುತ್ಥಳಿಯ ನೆಲ ಹಾಸಿನ ಮೇಲೆ ನಿಂತುಕೊಳ್ಳಲು ಮ್ಯಾಟ್ ವ್ಯವಸ್ಥೆ ಕಲ್ಪಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ರಾಣಿ ಚನ್ನಮ್ಮ ಉದ್ಯಾನವನ ಉದ್ಘಾಟನೆಗೆ ಇದೇ ಅಕ್ಟೋಬರ್ 08 ರಂದು ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಅವರು ಕಿತ್ತೂರಿಗೆ ಆಗಮಿಸಲಿದ್ದು ಈ ವೇಳೆ ಎಲ್ಲ ಚನ್ನಮ್ಮಾಜಿ ಅಭಿಮಾನಿಗಳು ಉಪಸ್ಥಿತರಿರುವಂತೆ ಕೋರಿದರು.
ಶಿಥಿಲಗೊಂಡ ಕೋಟೆ ಆವರಣದ ರಕ್ಷಣಾ ಗೋಡೆಗಳ ದುರಸ್ತಿ ಕಾಮಗಾರಿ, ಥೀಮ್ ಪಾರ್ಕ್ ಕಾಮಗಾರಿಗೆ ಸಚಿವರು ಭೂಮಿ ಪೂಜೆ ನೇರವೇರಿಸಲಿದ್ದಾರೆ ಎಂದು ಹೇಳಿದರು.
ಈ ವೇಳೆ ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ, ತಹಶೀಲ್ದಾರ ರವೀಂದ್ರ ಹಾದಿಮನಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಘೋರ್ಪಡೆ, ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಇಂಜಿನೀಯರ್ ಸಂಜೀವ ಮಿರಜಕರ,ಪ್ರಾಚ್ಯ ವಸ್ತು ಅಭಿಯಂತರ ಶ್ರೀಕಂಡೆ, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ, ಸಹಾಯಕ ಕ್ಯೂರೇಟರ್ ರಾಘವೇಂದ್ರ, ಸುನೀಲ ಘೀವಾರಿ ಆಷ್ಫಾಕ ಹವಾಲ್ದಾರ, ಬಸವರಾಜ ಸಂಗೊಳ್ಳಿ ಅಪ್ಪಾಸಾಹೇಬ ಶಿಲೇದಾರ, ಕೃಷ್ಣಾ ಬಾಳೇಕುಂದರಗಿ, ಆಶೋಕ ಮಾಳಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.