
ಚನ್ನಮ್ಮನ ಕಿತ್ತೂರು, ಡಿಸೆಂಬರ್ 09: ಪಟ್ಟಣದ ಬೆಲ್ಲದ ಓಣಿಯಲ್ಲಿ ಕಳೆದ 14ವರ್ಷಗಳಿಂದ ಇರುವ MSILಮದ್ಯದ ಅಂಗಡಿಯನ್ನು ಸ್ಥಳಾಂತರ ಮಾಡಬೇಕು ಅಂತ ಸ್ಥಳೀಯ ಮಹಿಳೆಯರು 3 ದಿನಗಳಿಂದ ಹೋರಾಟ ಮಾಡುತ್ತಿರುವುದಕ್ಕೆ ಕೊನೆಗೂ ಜಯ ಸಿಕ್ಕಿದೆ.
ಮದ್ಯದ ಅಂಗಡಿ ಎದುರು ಧರಣಿ ಕುಳಿತುಕೊಂಡಿರುವ ಮಹಿಳೆಯರು ಅಬಕಾರಿ, ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಶಾಸಕರು ಮತ್ತು ವಾರ್ಡ್ ಸದಸ್ಯರ ವಿರುದ್ಧ ಧಿಕ್ಕಾರ ಕೂಗಿದರು.ಕೊನೆಗೂ ಪ್ರತಿಭಟನಾ ಸ್ಥಳಕ್ಕೆ ದೌಡಯಿಸಿದ ಅಬಕಾರಿ ಇಲಾಖೆ ಅಧಿಕಾರಿಗಳು ಮತ್ತು ಸ್ಥಳೀಯ ಶಾಸಕ ಬಾಬಾಸಾಹೇಬ ಪಾಟೀಲ್ ಪ್ರತಿಭಟನಾಕಾರರ ಮನವೊಲಿಸಿ ಕೂಡಲೇ ಅಂಗಡಿ ಶಿಫ್ಟ್ ಮಾಡಲು ಸೂಚಿಸಿದರು.
ಇದಕ್ಕೂ ಮೊದಲು ‘ಸುವರ್ಣ ಸಮಾಚಾರ’ MSIL ಮದ್ಯದ ಅಂಗಡಿ ಶಿಫ್ಟ್ ಮಾಡಲು ಸ್ಥಳೀಯರ ಪ್ರತಿಭಟನೆ ಅಂತ ಸುದ್ದಿ ಪ್ರಸಾರ ಮಾಡಿತ್ತು. ಇದೀಗ ಸುದ್ದಿಯಿಂದ ಅಲರ್ಟ್ ಆಗಿರುವ ಅಧಿಕಾರಿಗಳು ಮತ್ತು ಜನಪ್ರತಿನಿಧಿ ಅಂಗಡಿ ಶಿಫ್ಟ್ ಮಾಡಲು ಮುಂದಾಗಿದ್ದಾರೆ.
ಐತಿಹಾಸಿಕ ಸ್ಮಾರಕ ಅಥವ ಮೂರ್ತಿ ಇರುವ ಸಮೀಪ ಯಾವುದೇ ಬಾರ್ ಇರಬಾರದು ಎಂಬ ನಿಯಮ ಇದ್ದರೂ ಅದನ್ನು ಗಾಳಿಗೆ ತೂರಿ ಇಲ್ಲಿ ಎಮಸೈಲ್ ಮದ್ಯದ ಅಂಗಡಿ ನಡೆಸಲಾಗುತ್ತಿದೆ. ಅಂಗಡಿ ಮಾರುದೂರದಲ್ಲಿ ಚನ್ನಮ್ಮ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರೂ ಲೆಕ್ಕಿಸದೇ ಮದ್ಯ ಮಾರಾಟ ನಡೆಸಲಾಗುತ್ತಿದೆ.
ಮಹಳೆಯರು, ಮಕ್ಕಳು, ವೃದ್ಧರು ಈ ಅಂಗಡಿ ಎದುರು ಓಡಾಡಲು ಮುಜುಗರ ಪಡುವಂತಾಗಿದೆ. ಮದ್ಯ ಸೇವಿಸಿದವರೆಲ್ಲ ಓಣಿಯಲ್ಲಿ ಮನಸ್ಸಿಸ್ಸಿಗೆ ಬಂದಂತೆ ಓಡಾಡುವುದು, ಚೀರಾಡುವುದು, ಎಲ್ಲೆಂದರಲ್ಲಿ ಬಾಟಲಿ, ಪ್ಯಾಕೆಟ್ಗಳನ್ನು ಎಸೆಯುವುದರಿಂದ ಜನರು ರೋಸಿ ಹೋಗಿದ್ದಾರೆ.ಮದ್ಯ ಕುಡಿದು ಪಕ್ಕದ ಮನೆಗಳಿಗೆ ಬಂದು ಏನೇನೋ ಮಾತನಾಡುವುದು, ಮಹಿಳೆಯರ ಜೊತೆಗೆ ಅನುಚಿತವಾಗಿ ವರ್ತಿಸುವುದು, ಮನೆ ಪಕ್ಕದಲ್ಲೇ ಮೂತ್ರ, ಮಲ ವಿಸರ್ಜನೆ ಮಾಡುವದು ವಿಪರೀತ ಅಸಹನೀಯವಾಗಿದೆ ಎಂದು ಮಹಿಳೆಯರು ಆರೋಪ ಮಾಡುತ್ತಿದ್ದರು.
ಡಿಸಿ, ಎಸಿ, ಎಂಎಲ್ಎ, ವಾರ್ಡ ಸದಸ್ಯರು ಎಲ್ಲರಿಗೂ ಅಂಗಡಿ ಸ್ಥಳಾಂತರಕ್ಕೆ ಮನವಿ ನೀಡಿದ್ದೇವೆ. ಆದರೆ ಪ್ರಯೋಜನ ಶೂನ್ಯ ಎಂದು ಬೆಲ್ಲದ ಓಣಿ ನಾಗರಿಕರು ಆರೋಪಿಸುತ್ತಿದ್ದರು.ಇನ್ನಮೇಲೆ ಆದರೂ ಈ ಮದ್ಯದಂಗಡಿ ಸ್ಥಳಾಂತರಕ್ಕೆ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಅಂತ ಪ್ರತಿಭಟನೆ ಮಾಡುತ್ತಿದ್ದರು. ಕೊನೆಗೂ ಅಧಿಕಾರಿಗಳು ಅಂಗಡಿ ಶಿಫ್ಟ್ ಮಾಡಲು ಮುಂದಾಗಿದ್ದಾರೆ.