
ಬೆಳಗಾವಿ, ಅಕ್ಟೋಬರ್ 13: ಲಕ್ಷ್ಮಣರಾವ್ ಕಿರ್ಲೋಸ್ಕರ್ ಪ್ರತಿಷ್ಠಿತ ಕಿರ್ಲೋಸ್ಕರ ಬ್ರದರ್ಸ್ ಲಿಮಿಟೆಡ್ (KBL) ಕಂಪನಿಯ ಸಂಸ್ಥಾಪಕರು. ಮೊಟ್ಟ ಮೊದಲ ಬಾರಿಗೆ ಭಾರತಕ್ಕೆ ವಸಾಹತುಶಾಹಿಯನ್ನು ಪರಿಚಯಿಸಿದ ಪುಟ್ಟ ಉದ್ಯಮಿ.
1888 ರಲ್ಲಿ ಬೆಳಗಾವಿಯ (ಈ ಹಿಂದಿದ್ದ) ರಿಟ್ಜ್ ಶ್ರೀ ಕೃಷ್ಣ ಥಿಯೇಟರ್ ಬಳಿ ಪುಟ್ಟದಾದ ಸೈಕಲ್ ರಿಪೇರಿ ಅಂಗಡಿ ಇಡುವ ಮೂಲಕ ಲಕ್ಷ್ಮಣರಾವ್ ಕಿರ್ಲೋಸ್ಕರ ಎಂಬುವವರು ರೂಪಾಯಿ ಲೆಕ್ಕದಲ್ಲಿ ಸ್ಥಾಪಿಸಿದ ಆ ಪುಟ್ಟ ಕಂಪನಿ ಇದೀಗ ದೇಶಾದ್ಯಂತ ಹಲವಾರು ಕಡೆ ತನ್ನ ಕಬಂಧಬಾಹು ವಿಸ್ತರಿಸುವ ಮೂಲಕ ಬಿಲಿಯನ್ ಡಾಲರ್ ಲೆಕ್ಕದಲ್ಲಿ ತನ್ನ ವ್ಯಾಪಾರದ ಮಿತಿಯನ್ನು ತಲುಪಿದೆ. ಇತ್ತೀಚೆಗೆ ಈ ಕಂಪನಿ ತನ್ನ ಶತಮಾನೋತ್ಸವ ಆಚರಿಸಿದ್ದು ದೇಶದ ಹಲವಾರು ಕಡೆಗಳಲ್ಲಿ ಶಾಖೆಗಳನ್ನು ಹೊಂದಿದೆ.
ಬೆಳಗಾವಿಯ ಪುಟ್ಟ ಪ್ರದೇಶದಲ್ಲಿ ಆರಂಭಗೊಂಡ ಈ ಕಂಪನಿಗೆ ಕೆಲ ದಿನಗಳ ನಂತರದಲ್ಲಿ ಆಗಿನ ಬ್ರಿಟಿಷ್ ಸರ್ಕಾರ ತನ್ನ ಕಂಪನಿ ತೆರವುಗೊಳಿಸುವಂತೆ ಸೂಚಿಸಿದ್ದರಿಂದ ಒಬ್ಬರಿಂದ 10 ಸಾವಿರ ಸಾಲ ಪಡೆದು ರೈಲ್ವೇ ಸ್ಟೇಷನ್ ಬಳಿಯ ಕುಂಡಾಲ ಎಂಬಲ್ಲಿ ಜಮೀನು ಖರೀದಿ ಮಾಡುವ ಮೂಲಕ ತನ್ನ ಉದ್ದಿಮೆಗೆ ಪುನಶ್ಚೇತನ ಪಡೆದುಕೊಳ್ಳುತ್ತದೆ. ಈಗಲೂ ಬೆಳಗಾವಿಯಲ್ಲಿ ಈ ಹೆಸರಿನ ರಸ್ತೆ ಇದೆ ಈ ಕಂಪನಿ ಪ್ರಾರಂಭ ಮಾಡಿದ ಪ್ರದೇಶಕ್ಕೆ ಕಿರ್ಲೋಸ್ಕರವಾಡಿ (ಕಿರ್ಲೋಸ್ಕರ್ ರಸ್ತೆ) ಎಂದು ಕರೆಯಲಾಗುತ್ತದೆ.
ಗುಜರಾತ್ ನ ಪ್ರಮುಖ ‘ನರ್ಮದಾ’ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಿದ ಕೀರ್ತಿ ಈ ಕಂಪನಿಗೆ ಸಲ್ಲತಕ್ಕದ್ದು. ಪಂಪ್, ಇಂಜಿನ್, ಕಾಂಪ್ರೆಸ್ಸರ್, ವಾಲ್ವ್, ಪಿಗ್ ಐರನ್, ಕನ್ ಸ್ಟ್ರಕ್ಷನ್, ಫ್ಲೈ ಓವರ್, ಬ್ರಿಡ್ಜ್ ಮುಂತಾದ ಮಹತ್ತರ ಕಾಮಗಾರಿಗಳನ್ನು ಕೈಗೊಳ್ಳುವ ಈ ಕಂಪನಿ ಸುಮಾರು 18 ಸಾವಿರ ನೌಕರರನ್ನು ಹೊಂದಿದ್ದು ವಿಶ್ವದಾದ್ಯಂತ ಹಲವಾರು ಕಡೆಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುತ್ತಿದೆ.
ಪ್ರಸ್ತುತ 3.2 ಬಿಲಿಯನ್ ಡಾಲರ್ ವಾರ್ಷಿಕ ವಹಿವಾಟು ಹೊಂದಿದ ಈ ಕಂಪನಿ ನಮ್ಮ ತವರು ಜಿಲ್ಲೆ ಬೆಳಗಾವಿಯದು ಅನ್ನೋದು ನಮಗೆ ಹೆಮ್ಮೆ. ಸದ್ಯ ಅತುಲ್ ಕಿರ್ಲೋಸ್ಕರ ಮತ್ತು ರಾಹುಲ್ ಕಿರ್ಲೋಸ್ಕರ ಬ್ರದರ್ಸ್ ಈ ಕಂಪನಿಯ ಒಡೆಯರಾಗಿದ್ದು ಈ ಕಂಪನಿ ಬೆಳಗಾವಿಯಲ್ಲಿ ಪ್ರಾರಂಭಗೊಂಡಿದ್ದು ತುಂಬ ಹೆಮ್ಮೆಯ ಸಂಗತಿ.