
ಸುವರ್ಣ ಸಮಾಚಾರ
ಚನ್ನಮ್ಮನ ಕಿತ್ತೂರು : ಬೆಳಗಾವಿ ಸುವರ್ಣಸೌಧಕ್ಕೆ ಪಂಚಮಸಾಲಿ ಸಮಾಜದಿಂದ 2A ಮೀಸಲಾತಿಗಾಗಿ ಮುತ್ತಿಗೆ ಹಾಕಲು ನಿರ್ಧರಿಸಿದ್ದು ಸರಕಾರ ಏನಾದರೂ ಹೋರಾಟ ಹತ್ತಿಕ್ಕಲು ಪ್ರಯತ್ನಿಸಿದರೆ ರಾಜ್ಯದಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಪಂಚ ಸೇನಾ ರಾಜ್ಯಾಧ್ಯಕ್ಷ ರುದ್ರಗೌಡ ಸೊಲಬಗೌಡ್ರ ಹೇಳಿದರು.
ಅವರು ಸೋಮವಾರ ಪಟ್ಟಣದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಇರುವ ಕಿತ್ತೂರು ರಾಣಿ ಚನ್ನಮ್ಮ ಸರ್ಕಲ್ ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಅಧಿವೇಶನದ ಪ್ರಾರಂಭದ ದಿನದಂದು ಐದು ಸಾವಿರಕ್ಕೂ ಹೆಚ್ಚು ಟ್ಯಾಕ್ಟರ್ ಹಾಗೂ ಸುಮಾರು 1 ಲಕ್ಷಕ್ಕೂ ಅಧಿಕ ಪಂಚಮಸಾಲಿ ಸಮಾಜದ ಮುಖಂಡರು, ರೈತರು ಮತ್ತು ಸಮಾಜದ ಬಾಂಧವರಿಂದ ಮುತ್ತಿಗೆ ಹಾಕಲಾಗುವುದು, ಕಳೆದ ನಾಲ್ಕು ವರ್ಷಗಳಿಂದ ಪಂಚಮಸಾಲಿ 2 A ಮಿಸಲಾತಿ ಹೋರಾಟ ನಿರಂತರವಾಗಿ ವಿಭಿನ್ನ ರೀತಿಗಳಲ್ಲಿ ನಡೆಯುತ್ತಿದ್ದರೂ ಸರ್ಕಾರ ನೋಡಿಯೂ ನೋಡದ ಜಾಣ ಕುರುಡರಂತೆ ಹಾಗೂ ಕೇಳಿಯೂ ಕೇಳದ ಕಿವುಡರಂತೆ ವರ್ತಿಸುತ್ತಿದೆ ಎಂದು ಸರ್ಕಾರದ ವಿರುದ್ಧ ಹರಿ ಹಾಯ್ದರು.
ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಬಸವ ಜಯ ಮೃತ್ಯಂಜಯ ಶ್ರೀಗಳು ಸಮುದಾಯವನ್ನು ಸಂಘಟಿಸಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ಹೋರಾಟ ಮಾಡುತ್ತಿದ್ದಾರೆ, ಈ ಹೋರಾಟ ಅಂತಿಮ ಹೋರಾಟ, ಮಾಡು ಇಲ್ಲವೇ ಮಡಿ ಹೋರಾಟ, ಆದರೆ ಪಂಚಮಸಾಲಿ ಸಮಾಜದ ಹೋರಾಟವನ್ನು ಹತ್ತಿಕ್ಕಲು ಸರ್ಕಾರ ಮುಂದಾದರೆ ಇದು ಸರ್ಕಾರಕ್ಕೂ ಮುಜುಗರ ಉಂಟುಮಾಡುತ್ತದೆ ಹಾಗೂ ನಮ್ಮ ಸಮುದಾಯವು ಸರ್ಕಾರದ ಮೇಲಿರುವ ನಂಬಿಕೆಯನ್ನು ಕಳೆದುಕೊಳ್ಳುತ್ತದೆ ಎಂದರು.
ಈ ವೇಳೆ ಕಿತ್ತೂರು ಪಂಚಸೇನಾ ತಾಲೂಕ ಅಧ್ಯಕ್ಷ ಮಹಾಂತೇಶ ಕರಬಸಣ್ಣವರ, ಉಪಾಧ್ಯಕ್ಷ ರಮೇಶ ಗದ್ದಿಹಳ್ಳಿ ಸೇರಿದಂತೆ ಇನ್ನು ಅನೇಕರು ಇದ್ದರು
