
ಬೆಂಗಳೂರು,ನವೆಂಬರ್ 27: ರಾಜ್ಯಾದ್ಯಂತ ಬುಗಿಲೆದ್ದಿರುವ ವಕ್ಫ್ ಎಂಬ ‘ಗುಮ್ಮ’ ನ ವಿರುದ್ಧ ಹರಿಹಾಯುತ್ತಿರುವ ಪ್ರತಿಪಕ್ಷ ಬಿಜೆಪಿ ಮುಖಂಡರು ಪ್ರತಿಭಟನೆ ಮೂಲಕ ಜನರಲ್ಲಿ ವ್ಯಾಪಕ ಪ್ರಚಾರ ನೀಡುತ್ತಿದ್ದು ಇದೀಗ ‘ಬಸವಣ್ಣನವರಂಗ ನೀವೂ ಹೊಳೆಗೆ ಹಾರಿ’ ಅಂತ ಭಾಷಣ ಮಾಡಿದ ಯ ಬಿಜೆಪಿ ಶಾಸಕ ಹಾಗೂ ಕೇಂದ್ರದ ಮಾಜಿ ಸಚಿವ ಬಸವನಗೌಡ ಪಾಟೀಲ ಯತ್ನಾಳ್ ಅವರ ಹೇಳಿಕೆ ತುಂಬಾನೇ ಸದ್ದು ಮಾಡುತ್ತಿದೆ. ಇವರು ಹೇಳಿಕೆಗೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಸೋಮವಾರ ಬೀದರನ ವಕ್ಫ್ ಹೋರಾಟಕ್ಕೆ ಚಾಲನೆ ನೀಡಿ ಮಾತನಾಡಿದ್ದ ಯತ್ನಾಳ ಅವರು ‘ವಕ್ಫ್ ನಿಂದ ನಿಮ್ಮ ಆಸ್ತಿ ರಕ್ಷಣೆ ಮಾಡಿಕೊಳ್ಳಬೇಕಾದರೆ, ನೀವು ಮನೆಯಿಂದ ಹೊರ ಬಂದು ಹೋರಾಟ ಮಾಡಬೇಕಾಗುತ್ತದೆ. ಜಮೀನು ಹೋದರೂ ನೀವು ಹೊರಗ ಬರಲ್ಲ ಎಂದರೆ ಬಸವಣ್ಣನವರ ಹಾಗೆ ತುಂಬಿದ ಹೊಳೆಗೆ ಹಾರಿ ಸಾಯಬೇಕು. ಇಲ್ಲವಾದರೆ ಗಡ್ಡ ಬಿಟ್ಟು ಮುಸ್ಲಿಂ ಆಗಿ ಎಂದು ಕೈಯಿಂದ ಸನ್ನೆ ಮಾಡಿದ ಘಟನೆ ಇಡೀ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ.
ಯತ್ನಾಳ ಅವರು ಹೇಳಿಕೆಗೆ ಪ್ರತಿಕ್ರಿಯಿಸಿರುವ ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ.ಜಾಮದಾರ್ ಅವರು ಯತ್ನಾಳ್ ಅವರ ಈ ಹೇಳಿಕೆ ಆಘಾತ ತಂದಿದೆ ಎಂದಿದ್ದಾರೆ. ಯತ್ನಾಳ್ ಅವರು ಸಂದರ್ಭ, ಸಮಯ ಮತ್ತು ಸ್ಥಳದ ಎಲ್ಲಾ ಜ್ಞಾನವನ್ನು ಕಳೆದುಕೊಂಡಿದ್ದಾರೆಂದು ಕಿಡಿಕಾರಿದ್ದಾರೆ.
ಯತ್ನಾಳ್ ಅವರ ಹೇಳಿಕೆಯು ಅಲ್ಪಸಂಖ್ಯಾತರ ವಿರುದ್ಧ ಬಹುಸಂಖ್ಯಾತರನ್ನು ಕೆರಳಿಸುವ ಉದ್ದೇಶದಿಂದ ಕೂಡಿದ್ದು, ಬಸವಣ್ಣನವರ ಹೆಸರನ್ನು ಹೇಳುವ ಮೂಲಕ ಎಲ್ಲೆ ಮೀರಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.