Home ಸ್ಥಳೀಯ “ಬಸವತತ್ವ ಕೊಲ್ಲುತ್ತಿರುವ ಸದಾಶಿವಾನಂದ ಶ್ರೀ”ಬಸವ ಪರ ಸಂಘಟನೆಗಳ ಆರೋಪ; ಎಚ್ಚರಿಕೆ ನೀಡಲು ಮನವಿ

“ಬಸವತತ್ವ ಕೊಲ್ಲುತ್ತಿರುವ ಸದಾಶಿವಾನಂದ ಶ್ರೀ”ಬಸವ ಪರ ಸಂಘಟನೆಗಳ ಆರೋಪ; ಎಚ್ಚರಿಕೆ ನೀಡಲು ಮನವಿ

0
“ಬಸವತತ್ವ ಕೊಲ್ಲುತ್ತಿರುವ ಸದಾಶಿವಾನಂದ ಶ್ರೀ”ಬಸವ ಪರ ಸಂಘಟನೆಗಳ ಆರೋಪ; ಎಚ್ಚರಿಕೆ ನೀಡಲು ಮನವಿ

ಗದಗ,ನವೆಂಬರ್ 06: ಬಸವ ಪರ ಸಂಘಟನೆಗಳು ನಗರದ ಶ್ರೀ ಶಿವಾನಂದ ಬೃಹನ್ಮಠದ ಪೂಜ್ಯ ಶಿವಾನಂದ ಮಹಾಸ್ವಾಮಿಗಳನ್ನು ಭೇಟಿಯಾಗಿ ಅವರ ಉತ್ತರಾಧಿಕಾರಿಗಳಾಗಿರುವ ಸದಾಶಿವಾನಂದ ಶ್ರೀಗಳಿಗೆ ಎಚ್ಚರಿಕೆ ಕೊಡಲು ಮನವಿ ಮಾಡಿದರು.

ಬಸವತತ್ವವನ್ನು ಉಳಿಸುವ ಬದಲು ಮಠದ ಸ್ವಾಮಿಯೊಬ್ಬರು ಅದನ್ನು ಕೊಲೆಗೈಯ್ಯುವ ಹುನ್ನಾರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ತಾವು ತಮ್ಮ ಉತ್ತರಾಧಿಕಾರಿಗಳಿಗೆ ಸ್ಪಷ್ಟವಾದ ಎಚ್ಚರಿಕೆಯನ್ನು ನೀಡಿ,ಮಠದ ಪರಂಪರೆ ಪ್ರಕಾರ ನಡೆದುಕೊಳ್ಳಲು ನಿರ್ದೇಶನ ಕೊಡಬೇಕು. ಇಲ್ಲದಿದ್ದರೆ ಬಸವತತ್ವದ ಹಿನ್ನೆಲೆಯಲ್ಲಿ ಮಠವನ್ನು ಮುನ್ನಡೆಸಿಕೊಂಡು ಹೋಗುವ ಉತ್ತರಾಧಿಕಾರಿಗಳನ್ನು ನೇಮಿಸಿಕೊಳ್ಳಬೇಕು, ಎಂದು ಕೋರಿಕೊಳ್ಳಲಾಯಿತು.

ಹಿರಿಯ ಶ್ರೀಗಳನ್ನು ಭೇಟಿ ಮಾಡಿದ ನಿಯೋಗ, ಶಿವಾನಂದ ಮಠವು ಜಾತ್ಯತೀತ ತತ್ತ್ವಗಳಿಗೆ ಬದ್ಧವಾದ ಮಠವಾಗಿದೆ. ಸರ್ವಜಾತಿಯವರಿಗೆ ಇಷ್ಟಲಿಂಗವನ್ನು ಕರುಣಿಸಿ, ಅವರಲ್ಲಿ ಸಮಾನತೆಯ ಬೀಜವನ್ನು ಬಿತ್ತಿದೆ. ಮಠವೆಂದರೆ ಜಾತಿ ಅಲ್ಲ ಎಂದು ನಿರೂಪಿಸುವ ಮಠಗಳಲ್ಲಿ ಇದೂ ಒಂದು, ಎಂದು ಸ್ಮರಿಸಿಕೊಂಡರು.

ಮಠದ ನೀತಿ-ನಿಯಮಗಳಿಗೆ ಸದಾಶಿವಾನಂದ ಶ್ರೀಗಳು ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿರುವುದನ್ನು ಖಂಡಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಶಿವಾನಂದ ಮಹಾಸ್ವಾಮಿಗಳಿಗೆ ಮನವಿ ಪತ್ರ ಕೊಡಲಾಯಿತು.ಪತ್ರದಲ್ಲಿ ಲಿಂಗಾಯತ ಧರ್ಮಕ್ಕೆ ವ್ಯತಿರಿಕ್ತವಾದ ವಿರೋಧಿ ಸಿದ್ಧಾಂತಗಳನ್ನು ಹೊಂದಿರುವಂತಹ ಆರ್. ಎಸ್. ಎಸ್. ಮತ್ತು ವಿಶ್ವಹಿಂದೂ ಪರಿಷತ್‌ನಂತಹ ಸನಾತನ ಸಂಘಟನೆಗಳೊಂದಿಗೆ ಕೈಜೋಡಿಸಿ ಸದಾಶಿವಾನಂದ ಶ್ರೀಗಳು ಲಿಂಗಾಯತ ಧರ್ಮವನ್ನು ಸಂಪೂರ್ಣವಾಗಿ ಅಪ್ರಸ್ತುತಗೊಳಿಸುವ ಹುನ್ನಾರದ ಭಾಗವಾಗಿದ್ದಾರೆ ಎಂದು ತಿಳಿಸಲಾಗಿದೆ.

ಇವರು ಗೌರವ ಸಂಪಾದನೆ ಮಾಡಿರುವ ಕೀಳುಮಟ್ಟದ ‘ವಚನ ದರ್ಶನ’ ಪುಸ್ತಕ, ವಿವಿಧ ಪ್ರದೇಶಗಳಲ್ಲಿ ಬಿಡುಗಡೆಗೊಳಿಸುವುದರೊಂದಿಗೆ, ಸನಾತನಿಗಳು ನಡೆಸುವ ಸಭೆಗಳಲ್ಲಿ ಭಾಗವಹಿಸುತ್ತಲೇ ಲಿಂಗಾಯತರನ್ನು ಲಿಂಗಾಯತ ಪ್ರಗತಿಪರರನ್ನು ಲಿಂಗಾಯತ ಸ್ವಾಮಿಗಳನ್ನು ಅಲ್ಲಗಳೆಯುತ್ತಾ, ಅವರ ಬಗೆಗೆ ಉಡಾಫೆಯಾಗಿ – ಹಗುರವಾಗಿ ಮಾತನಾಡುತ್ತಿದ್ದಾರೆ. ಇದು ನಮಗೆಲ್ಲರಿಗೂ ಅತ್ಯಂತ ನೋವನ್ನುಂಟು ಮಾಡಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.ಮನವಿಗೆ ಶಿವಾನಂದ ಶ್ರೀಗಳು ಸಕಾರಾತ್ಮಕವಾಗಿ ಪತ್ರಿಕ್ರಿಯೆ ನೀಡಿದರೆಂದು ನಿಯೋಗದಲ್ಲಿದ್ದ ಶರಣ ಸಾಹಿತ್ಯ ಪರಿಷತ್ತಿನ ಪ್ರಕಾಶ ಅಸುಂಡಿ ಹೇಳಿದರು.

“ನಮ್ಮ ಉಸಿರು ಇರುವವರೆಗೂ ಮಠ ಬಸವ ತತ್ವ ಪರವಾಗಿಯೇ ದುಡಿಯುತ್ತದೆ, ಸದಾಶಿವಾನಂದ ಶ್ರೀಗಳ ಚಟುವಟಿಕೆಯಿಂದ ಮನಸ್ಸಿಗೆ ಬಹಳ ನೋವಾಗಿದೆ. ಅವರು ತಿಂಗಳಿಗೆ ಒಂದೆರಡು ಭಾರಿ ಮಾತ್ರ ಬಂದು ಒಂದು ರೂಮಿನಲ್ಲಿ ಇರುತ್ತಾರೆ. ಊಟವನ್ನೂ ಹೊರಗಡೆಯಿಂದ ತರೆಸಿಕೊಳ್ಳುತ್ತಾರೆ ಎಂದು ಶಿವಾನಂದ ಶ್ರೀಗಳು ತಿಳಿಸಿದರು,” ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಶೇಕಣ್ಣ ಕವಳಿಕಾಯಿ ಹೇಳಿದರು.

“ಸದಾಶಿವಾನಂದ ಶ್ರೀಗಳು ಬಂದಾಗ ತಿಳಿಸಿ ನಾವು ಮತ್ತೆ ಬಂದು ಅವರ ಜೊತೆ ಮಾತನಾಡುತ್ತೇವೆ ಎಂದು ಶಿವಾನಂದ ಶ್ರೀಗಳಿಗೆ ಹೇಳಿದೆವು,” ಎಂದು ಬಸವ ದಳದ ನಿಂಗನಗೌಡ ಹಿರೇಸಕ್ಕರಗೌಡ್ರ ಹೇಳಿದರು.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಗದಗ ಜಿಲ್ಲಾಧ್ಯಕ್ಷರಾದ ಕೆ.ಎಸ್. ಚೆಟ್ಟಿ, ಕಾಯ೯ದಶಿ೯ ಶೇಖಣ್ಣ ಎಂ. ಕವಳಿಕಾಯಿ, ಗದಗ ಬಸವದಳದ ಅಧ್ಯಕ್ಷ ವಿ.ಕೆ. ಕರೇಗೌಡ್ರ, ಬಸವಕೇಂದ್ರದ ಮುಖಂಡರಾದ ಎನ್.ಎಚ್. ಹಿರೇಸಕ್ಕರಗೌಡ್ರ, ಎಸ್.ಎನ್. ಹಕಾರಿ, ಶಿವನಗೌಡ ಗೌಡರ, ಲಿಂಗಾಯತ ಪ್ರಗತಿಶೀಲ ಸಂಘದ ಮಾಜಿ ಅಧ್ಯಕ್ಷ ಶೇಖಣ್ಣ ಕಳಸಾಪೂರಶೆಟ್ರ, ಸಿದ್ದು ಅಂಗಡಿ, ಗದಗ ತಾಲೂಕ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರಕಾಶ ಅಸುಂಡಿ ಹಾಗೂ ಬಸವಪರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here