
ಬೆಳಗಾವಿ, ಅಕ್ಟೋಬರ್ 18: ಬೆಳಗಾವಿ ಚಳಿಗಾಲದ ಅಧಿವೇಶನದ ಅಧಿಕೃತ ದಿನಾಂಕವನ್ನು ಸರ್ಕಾರವೇ ಪ್ರಕಟಿಸಲಿದ್ದು, ಸಿದ್ಧತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದ್ದಾರೆ.
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಧಿವೇಶನ ಯಶಸ್ವಿಯಾಗಲು ಎಲ್ಲರ ಸಹಕಾರ ಅಗತ್ಯ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಧಿವೇಶನದ ಸಿದ್ಧತೆ ನಡೆಯಲಿದೆ. ಎಲ್ಲರೂ ಟೀಂ ವರ್ಕ್ ಆಗಿ ಕೆಲಸ ಮಾಡಲು ಸೂಚನೆ ನೀಡಲಾಗಿದೆ ಎಂದರು.
ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಹೆಚ್ಚಿನ ಸಮಯ ಮೀಸಲಿಡುತ್ತೇವೆ. ಕಳೆದ ಬಾರಿಯೂ ನಾಲ್ಕು ದಿನಕ್ಕೆ ಅವಕಾಶ ನೀಡಲಾಗಿದೆ ಎಂದು ಹೇಳಿದ ಖಾದರ್, ಅಧಿವೇಶನ ನೋಡಲು ಎಲ್ಲ ವರ್ಗದ ಜನರಿಗೂ ಅವಕಾಶ ನೀಡಲಾಗುವುದು. ಸುಲಭವಾಗಿ ಎಲ್ಲರಿಗೂ ಪಾಸ್ ಸಿಗಬೇಕು ಎಂಬುದು ನಮ್ಮ ಆಶಯ. ಶಾಲಾ, ಕಾಲೇಜಿನ ಮಕ್ಕಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಬರಲಿದ್ದಾರೆ ಎಂದು ತಿಳಿಸಿದರು.
ಇನ್ನು, ಕಾಂಗ್ರೆಸ್ ಅಧಿವೇಶನದ ನೂರು ವರ್ಷದ ಕಾರ್ಯಕ್ರಮ ಹಾಗೂ ಕಿತ್ತೂರು ವಿಜಯೋತ್ಸವ 200ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಅಧಿವೇಶಕ್ಕೆ ಬರುವ ಮಕ್ಕಳಿಗೆ ಈ ಎರಡು ಘಟನೆಗಳ ಮಹತ್ವ ತಿಳಿಸುತ್ತೇವೆ. ಅದೇ ರೀತಿ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗುವುದು ಎಂದರು.