
ಬೆಳಗಾವಿ, ನವೆಂಬರ್ 13: ಬೆಳಗಾವಿ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನವು ನವೆಂಬರ್ 23, 24 ರಂದು ಮೂಡಲಗಿಯ ಆರ್.ಡಿ.ಎಸ್.ಮಹಾವಿದ್ಯಾಲಯದ ಆವರಣದಲ್ಲಿ ಜರುಗಲಿದೆ.ನಿವೃತ್ತ ಯೋಧ ಮಕ್ತುಂ ತಶೀಲ್ದಾರ ಅವರು ರಾಷ್ಟ್ರ ಧ್ವಜಾರೋಹಣವನ್ನು ನೆರವೇರಿಸುವರು.
ಕ.ಸಾ.ಪ. ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಅವರು ಪರಿಷತ್ತಿನ ಧ್ವಜಾರೋಹಣವನ್ನು ನೆರವೇರಿಸುವರು. ಮೂಡಲಗಿ ತಾಲೂಕಾಧ್ಯಕ್ಷ ಡಾ.ಸಂಜಯ ಶಿಂಧಿಹಟ್ಟಿ ಅವರು ನಾಡ ಧ್ವಜಾರೋಹಣವನ್ನು ನೆರವೇರಿಸುವರು.
ಅಡವಿಸಿದ್ಧರಾಮ ಮಹಾಸ್ವಾಮಿಗಳು, ಅಮೃತಬೋಧ ಮಹಾಸ್ವಾಮಿಗಳು, ಶ್ರೀಧರಬೋಧ ಮಹಾಸ್ವಾಮಿಗಳು ದಿವ್ಯ ಸಾನಿಧ್ಯದವನ್ನು ವಹಿಸಿಕೊಳ್ಳಲಿದ್ದಾರೆ.ಕಸಾಪ ರಾಜ್ಯಾಧ್ಯಕ್ಷ ನಾಡೋಜ.ಡಾ.ಮಹೇಶ ಜೋಶಿ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.
ಗೋಕಾಕದ ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಅಕ್ಕಿ ಅವರು ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ. ಅರಭಾವಿಯ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಕೆ.ಎಲ್.ಇ.ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರು ಧ್ವಜ ಹಸ್ತಾಂತರ ಮಾಡಲಿದ್ದಾರೆ. ಮಂಗಲಾ ಮೆಟಗುಡ್ಡ ಅವರು ಆಶಯ ನುಡಿಗಳನ್ನಾಡಲಿದ್ದಾರೆ.
ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಬಾಳಾಸಾಹೇಬ ಲೋಕಾಪುರ ಮುಖ್ಯ ಅತಿಥಿಗಳಾಗಿ ವೇದಿಕೆ ಅಲಂಕರಿಸಲಿದ್ದಾರೆ.
ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಪುಸ್ತಕ ಮಳಿಗೆ ಉದ್ಘಾಟನೆ ಮಾಡಲಿದ್ದಾರೆ. ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಚಿತ್ರಕಲಾ ಪ್ರದರ್ಶನ ಉದ್ಘಾಟನೆ ಮಾಡಲಿದ್ದಾರೆ.
ಡಾ.ಅಣ್ಣಪ್ಪ ಪಾಂಗಿ ಅವರು ರಚಿಸಿದ “ನೀವೂ ಶತಾಯುಷಿಗಳಾಗಿ” ಕೃತಿಯನ್ನು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಲೋಕಾರ್ಪಣೆ ಮಾಡಲಿದ್ದಾರೆ.
ಸಮ್ಮೇಳನದಲ್ಲಿ ಕನ್ನಡಪರ ಚಿಂತನೆ, ವೈದ್ಯಗೋಷ್ಠಿ, ಸಂಕೀರ್ಣಗೋಷ್ಠಿ, ಕವಿಗೋಷ್ಠಿ, ಕಾವ್ಯವಾಚನ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಕ.ಸಾ.ಪ.ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕಾ ಅಧ್ಯಕ್ಷರುಗಳು, ಸಾಹಿತಿಗಳು, ಕಲಾವಿದರು, ಬೆಳಗಾವಿ ಜಿಲ್ಲಾ ಕ.ಸಾ.ಪ. ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು, ಕ.ಸಾ.ಪ. ಸರ್ವ ಸದಸ್ಯರು ಮತ್ತು ಎಲ್ಲ ಕನ್ನಡಪರ ಸಂಘಟನೆಗಳು, ಸಮಸ್ತ ಕನ್ನಡ ಮನಸ್ಸುಗಳು ಎಲ್ಲರೂ ಈ ಸಮ್ಮೇಳನವನ್ನು ಯಶಸ್ವಿಗೊಳಿಸಲು ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ, ಮೂಡಲಗಿ ತಾಲೂಕಾಧ್ಯಕ್ಷ ಡಾ.ಸಂಜಯ ಶಿಂಧಿಹಟ್ಟಿ ಅವರು ಆಹ್ವಾನಿಸಿದ್ದಾರೆ.