
ಹಾವೇರಿ, ನವೆಂಬರ್ 29: ಮಂತ್ರಿ, ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಎಲ್ಲ ಹುದ್ದೆಗಳನ್ನು ಅಲಂಕರಿಸುವ, ನಿರ್ವಹಿಸುವ ಸಹಜ ಆಸೆ ಇದ್ದೇ ಇದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಶಿಗ್ಗಾವಿಯಲ್ಲಿ ಶುಕ್ರವಾರ (ನ.29) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ತೀರ್ಮಾನವೇ ಅಂತಿಮ. ಈ ಹಿಂದೆ ಸಿಎಂ ಆಗುತ್ತಾರೆ ಎಂದು ಹೇಳಿ ಹೆಸರು ಓಡಾಡಿತ್ತು. ಈಗ ಅಧ್ಯಕ್ಷರಾಗುತ್ತಾರೆಂದು ಹೆಸರು ಓಡಾಡುತ್ತಿದೆ. ನಮ್ಮ ಉತ್ಸಾಹ, ಸಂಘಟನೆ, ಪಕ್ಷನಿಷ್ಠೆ ಗಮನಿಸಿ ಪಕ್ಷ ನಿರ್ಧಾರ ತೆಗೆದುಕೊಳ್ಳಲಿ ಎಂದು ಜಾರಕಿಹೊಳಿ ಹೇಳಿದ್ದಾರೆ.
ಈ ವಿಚಾರವಾಗಿ ನಾನು ಯಾವುದೇ ರೀತಿ ಒತ್ತಡ ಹಾಕಿಲ್ಲ ಎಂದರು. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿದ್ದೇವೆ. ಅದರ ಬಗ್ಗೆ ತೃಪ್ತಿ ಇದೆ. ಮಂತ್ರಿಯಾಗಿ ಕೆಲಸ ಮಾಡುತ್ತಿದ್ದೇವೆ, ತೃಪ್ತಿಯಿದೆ ಎಂದಿದ್ದಾರೆ.