
ಬೇಸಿಗೆ ರಜೆಯ ನಂತರ ನಾಳೆಯಿಂದ ಶಾಲೆಗಳ ಪುನಾರಂಭ
ಬೆಂಗಳೂರು: ಬೇಸಿಗೆ ರಜೆಯ ನಂತರ ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ನಾಳೆಯಿಂದ ಪುನರಾರಂಭವಾಗಲಿದ್ದು, ಶಾಲಾ ಶಿಕ್ಷಣ ಇಲಾಖೆ ಇದೇ ಹಿನ್ನೆಲೆಯಲ್ಲಿ ಶಿಷ್ಟ ಹಾಗೂ ಸ್ವಚ್ಛ ಶಾಲಾ ಪರಿಸರ ಕಲ್ಪಿಸಲು ಎಲ್ಲ ಶಿಕ್ಷಕರು, ಮುಖ್ಯಶಿಕ್ಷಕರು ಹಾಗೂ ಸಿಬ್ಬಂದಿಯು ಮೇ 29 ರಂದು ಹಾಜರಾಗುವಂತೆ ನಿರ್ದೇಶನ ನೀಡಿದೆ.
ಶಾಲಾ ಆವರಣದ ಸ್ವಚ್ಛತೆ, ಕೊಠಡಿಗಳ ಒಡಕುಗಳ ವೀಕ್ಷಣೆ, ಶೌಚಾಲಯಗಳ ನಿರ್ವಹಣೆ, ಮೇಲ್ಚಾವಣಿಗಳ ಪರಿಶುದ್ಧತೆ ಹಾಗೂ ಬಿಸಿಯೂಟದ ಪರಿಕರಗಳ ತಯಾರಿ ಪ್ರಮುಖವಾಗಿ ಕೈಗೊಳ್ಳಬೇಕಾಗಿದೆ. ಜೊತೆಗೆ ತಳಿರು ತೋರಣ ಹಾಕಿ, ರಂಗೋಲಿ ಬಿಡಿಸಿ ಶಾಲಾ ವಾತಾವರಣವನ್ನು ಮಕ್ಕಳಿಗೆ ಆಕರ್ಷಕವಾಗಿ ರೂಪಿಸಬೇಕೆಂದು ತಿಳಿಸಲಾಗಿದೆ.
ಮೇ 30ರಂದು ಮಕ್ಕಳಿಗೆ ಉತ್ಸಾಹಭರಿತ ಸ್ವಾಗತ ನೀಡಲು ಎಲ್ಲ ಶಾಲೆಗಳು ಸಜ್ಜಾಗಬೇಕು. ಬಿಸಿಯೂಟದ ವ್ಯವಸ್ಥೆಗಾಗಿ ಅಗತ್ಯವಾದ ಅಕ್ಕಿ, ಬೇಳೆ, ತರಕಾರಿ, ಮೊಟ್ಟೆ ಮೊದಲಾದ ಪಡಿತರ ವಸ್ತುಗಳನ್ನು ತಂದುಕೊಳ್ಳಬೇಕಾಗಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಖಚಿತಪಡಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ.
ಅಡುಗೆ ಸಿಬ್ಬಂದಿ ಹಾಗೂ ಸಹಾಯಕರು ಆರೋಗ್ಯ ತಪಾಸಣೆಗೆ ಒಳಪಡಬೇಕು. ಮೊದಲ ದಿನವೇ ಮಕ್ಕಳಿಗೆ ಸಿಹಿಯೂಟದ ಜೊತೆಗೆ ಬೇಯಿಸಿದ ಮೊಟ್ಟೆ ವಿತರಣೆ ಮಾಡಬೇಕೆಂದು ಇಲಾಖೆ ಪ್ರಕಟಿಸಿರುವ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.