
ಮೈಸೂರು, ಅಕ್ಟೋಬರ್ 12: ಮೈಸೂರು ದಸರಾ ಸಂಭ್ರಮ ( Mysurudasara 2024) ಅಂತಿಮ ಘಟ್ಟ ತಲುಪಿದೆ. 9 ದಿನಗಳಿಂದ ವಿವಿಧ ಕಾರ್ಯಕ್ರಮಗಳು ಜನ ಮನ ಸೂರೆಗೊಂಡಿದ್ದು, ಶನಿವಾರ ವಿಜಯ ದಶಮಿ ಜಂಬೂಸವಾರಿ(Jamboosavari) ನಡೆಯಲಿದೆ. ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿ ದೇವಿಯನ್ನು ಹೊತ್ತು ಅಭಿಮನ್ಯು ಸಾಗಲಿದ್ದು, ಮೈಸೂರು ಮೈಸೂರು ಜಂಬೂಸವಾರಿಗೆ ಸಿಂಗರಿಸಿಕೊಂಡು ಸಜ್ಜಾಗಿದೆ.
ಈ ಬಾರಿ ಸಾಕಷ್ಟು ಅದ್ದೂರಿಯಾಗಿ ದಸರಾ ಕಾರ್ಯಕ್ರಮ ನಡೆದಿದೆ. ಮೈಸೂರು ಜಿಲ್ಲಾಡಳಿತ ಜಂಬೂಸವಾರಿಗೆ ಸಕಲ ಸಿದ್ಧತೆ ಕೈಗೊಂಡಿದೆ. ಅರಮನೆ ಮುಂಭಾಗ 30 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ.
ಇಂದು (ಶನಿವಾರ) ಮಧ್ಯಾಹ್ನ 1.41ರಿಂದ 2.10 ಗಂಟೆಯೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Sidsaramaih) ಅವರು ಅರಮನೆ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಚಾಮುಂಡೇಶ್ವರಿ ವಿಗ್ರಹ ಹೊತ್ತ ಚಿನ್ನದ ಅಂಬಾರಿಗೆ ಸಂಜೆ 4 ರಿಂದ 4.30ರ ಕುಂಭ ಲಗ್ನದಲ್ಲಿ ಪುಷ್ಪಾರ್ಚನೆ ನೆರವೇರಿಸುವ ಮೂಲಕ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ.ಮಹದೇವಪ್ಪ ಸೇರಿದಂತೆ ಇತರ ಗಣ್ಯರು ಭಾಗವಹಿಸಲಿದ್ದಾರೆ.