
ಬೆಳಗಾವಿ, ಡಿಸೆಂಬರ್03: ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕನ್ನಡವನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಕಿತ್ತೂರು ಕರ್ನಾಟಕ ಸೇನೆ ಪದಾಧಿಕಾರಿಗಳು ಲಿಂಗರಾಜ ಕಾಲೇಜಿನ ಪ್ರಾಂಶುಪಾಲರಿಗೆ ಕನ್ನಡಕ್ಕೆ ಆದ್ಯತೆ ನೀಡುವಂತೆ ಕೋರಿ ಮನವಿ ಮಾಡಿದ್ದಾರೆ.
ಕಾಮರ್ಸ್ ವಿಭಾಗದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಿಂದಿ ಮತ್ತು ಇಂಗ್ಲೀಷ್ ಗೆ ಮಾತ್ರ ಆದ್ಯತೆ ನೀಡುವಂತೆ ಆದೇಶಿಸಲಾಗಿದೆ ಎಂಬ ಮಾಹಿತಿಯ ಆಧಾರದ ಮೇಲೆ ವಿದ್ಯಾರ್ಥಿಗಳಲ್ಲಿ ಕನ್ನಡದ ಬಗೆಗಿನ ಕಾಳಜಿಯನ್ನು ಮರೆಮಾಚುವಲ್ಲಿ ಪರೋಕ್ಷವಾಗಿ ಲಿಂಗರಾಜ ಕಾಲೇಜು ಮುಂದಾಗಿದೆ ಎಂದು ಆರೋಪಿಸಿದ ಕಿತ್ತೂರು ಕರ್ನಾಟಕ ಸೇನೆ ಮುಖಂಡರು ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿ ಕನ್ನಡದ ಉಳಿವಿಗೆ ಕೆ.ಎಲ್.ಇ ಸಂಸ್ಥೆ ಕೊಡುಗೆ ಅಪಾರವಾಗಿದೆ ಇತ್ತೀಚಿನ ಬೆಳವಣಿಗೆ ಗಮನಿಸಿದಾಗ ಕನ್ನಡವನ್ನು ಅಸಡ್ಡೆ ಮಾಡಲಾಗುತ್ತಿದೆ ಈ ರೀತಿಯ ಕಾಲೇಜಿನ ಧೋರಣೆ ಸರಿಪಡಿಸಿಕೊಳ್ಳಬೇಕು ಇಲ್ಲದೇ ಹೋದಲ್ಲಿ ಕಾರ್ಯಕ್ರಮಕ್ಕೆ ಅವಕಾಶ ನೀಡುವುದಿಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಮನವಿ ಸ್ವೀಕರಿಸಿದ ಪ್ರಾಂಶುಪಾಲರು ಕನ್ನಡದ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಕಾಲೇಜು ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳಿಗೆ ಈ ರೀತಿಯ ಲೋಪವಾಗಿರುವುದಕ್ಕ ಕ್ಷಮೆ ಯಾಚಿಸಿದರು ಮುಂದೆ ಈ ರೀತಿ ಪ್ರಸಂಗ ಉಂಟಾಗದಂತೆ ಎಚ್ಚರಿಕೆ ವಹಿಸುವುದಾಗಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಈ ವೇಳೆ ಕಿತ್ತೂರು ಕರ್ನಾಟಕ ಸೇನೆ ರಾಜ್ಯ ಪದಾಧಿಕಾರಿ ರಮೇಶ ತಳವಾರ, ಬೆಳಗಾವಿ ತಾಲೂಕು ಅಧ್ಯಕ್ಷ ಅನೀಲ ದಡ್ಡಿಮನಿ, ವಾಸು ಬಸನಾಯ್ಕರ ಹಾಗೂ ಬಸೂ ಹಳೇಮನಿ ಮೊದಲಾದವರು ಮನವಿ ಸಲ್ಲಿಸಿದರು.