
ಬೆಂಗಳೂರು, ಜನವರಿ 09: ಬಿಜೆಪಿ ನಾಯಕ ಸಿ ಟಿ ರವಿ ಅವರು ಡಿಸೆಂಬರ್ 19 ರಂದು ಬೆಳಗಾವಿ ವಿಧಾನಮಂಡಲ ಅಧಿವೇಶನದ ಕೊನೆಯ ದಿನ ಸುವರ್ಣಸೌಧದಲ್ಲಿ ತಮ್ಮ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಕರಣ ಸಂಬಂಧ ಗುರುವಾರ ಸಿಐಡಿ ಅಧಿಕಾರಿಯ ಮುಂದೆ ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ.
ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ವಿಧಾನ ಪರಿಷತ್ತಿನಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಆಕ್ರೋಶಗೊಂಡ ಜನರ ಗುಂಪೊಂದು ಎಂಎಲ್ಸಿ ಸಿಟಿ ರವಿ ಅವರ ಮೇಲೆ ಹಲ್ಲೆ ನಡೆಸಲು ಯತ್ನಿಸಿತ್ತು.ಸಿಐಡಿ ವಿಚಾರಣೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿಟಿ ರವಿ ಅವರು, ನನ್ನ ಮೇಲಿನ ಹಲ್ಲೆ ಸಂಬಂಧ ಸಭಾಪತಿಗೆ ದೂರು ಕೊಟ್ಟಿದ್ದರು. ಈ ಬಗ್ಗೆ ತನಿಖೆ ನಡೆಸಲು ಸಭಾಪತಿ ಸೂಚಿಸಿದ್ದರು.
ಸುವರ್ಣಸೌಧದ ಪಶ್ಚಿಮದ್ವಾರದ ಸಮೀಪ ಹಲ್ಲೆಗೆ ಯತ್ನಿಸಿದ್ದರು. ಪರಿಷತ್ ಸಭಾಂಗಣಕ್ಕೆ ತೆರಳುವಾಗ ಮತ್ತೆ ಹಲ್ಲೆಗೆ ಮುಂದಾಗಿದ್ದರು. ಈ ಬಗ್ಗೆ ಸಿಐಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ ಎಂದರು.