
ಮೈಸೂರು, ಅಕ್ಟೋಬರ್ 28: ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆಯನ್ನು ರದ್ದುಗೊಳಿಸಿ ಹೊಸ ಅಧಿಸೂಚನೆ ಹೊರಡಿಸಬೇಕು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದರು.
ಮೈಸೂರಿನ ಹಾರ್ಡಿಂಗ್ ವೃತ್ತದ ಬಳಿ ಪ್ರತಿಭಟನೆ ನಡೆಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಚನ್ನಪಟ್ಟಣದಲ್ಲಿ ನಡೆಯುತ್ತಿರುವುದು ಉಪಚುನಾವಣೆಯಲ್ಲ. ಅದು ದರೋಡೆ. ಎರಡು ಪಕ್ಷದವರು ದರೋಡೆಗೆ ನಿಂತಿದ್ದಾರೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಅವರಿಂದ ಹಿಡಿದು ಎಲ್ಲರಿಗೂ ಮರ್ಯಾದೆ ಅಷ್ಟೇ. ಚುನಾವಣಾ ಆಯೋಗದ ಆಯುಕ್ತರು ಚನ್ನಪಟ್ಟಣದಲ್ಲಿ ಕ್ಯಾಂಪ್ ಮಾಡಬೇಕು ಎಂದು ಒತ್ತಾಯಿಸಿದರು.
ಒಬ್ಬೊಬ್ಬರ ಬಳಿಯೂ 500 ಕೋಟಿ ರೂ. ಇದ್ದು, ಒಂದು ವೋಟ್ಗೆ 2,500 ರಿಂದ ಲಕ್ಷ ರೂ. ವರೆಗೆ ತಲುಪಿದೆ. ಹಾಗಾಗಿ ಚುನಾವಣಾ ಆಯೋಗ ಅಲ್ಲಿಗೆ ತೆರಳಿ ಪ್ರಕರಣ ದಾಖಲಿಸಿ, ಚುನಾವಣೆ ರದ್ದುಗೊಳಿಸಬೇಕು. ಮತ್ತೆ ಮರು ಚುನಾವಣೆ ಮಾಡಬೇಕು" ಎಂದು ಆಗ್ರಹಿಸಿದರು.