ದಾವಣಗೆರೆ: ಚಿತ್ರನಟ ದಿ .ಶಂಕರ್ ನಾಗ್ ಹೆಸರಿನಲ್ಲಿ ಒಂದು ಫಿಲಂ ಸಿಟಿಯಾಗಬೇಕು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್
ಚಿತ್ರೋದ್ಯಮ ಸೇರಿದಂತೆ ಯಾವುದೇ ರಂಗದಲ್ಲಾಗಲಿ ವೃತ್ತಿ ವೈಷಮ್ಯ ಇದ್ದೇ ಇರುತ್ತದೆ. ಅಂತಹದರಲ್ಲಿ 80-90ರ ದಶಕದಲ್ಲಿ ಕೋಟ್ಯಾಂತರ ರೂ. ಖರ್ಚು ಮಾಡಿ ಸಿನಿಮಾಗಳನ್ನು ನಿರ್ಮಿಸಿದ ಕೀರ್ತಿ ನಟ ನಿರ್ಮಾಪಕ ವಿ.ರವಿಚಂದ್ರನ್ ರಿಗೆ ಸಲ್ಲುತ್ತದೆ ಎಂದು ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ನಗರದ ಎಂಸಿಸಿ ಎ ಬ್ಲಾಕಿನಲ್ಲಿರುವ ವನಿತಾ ಸಮಾಜದ ಆಶ್ರಯ ಹಿರಿಯ ವನಿತೆಯರ ವೃದ್ಧಾಶ್ರಮದಲ್ಲಿ ಗುರುವಾರ ದಾವಣಗೆರೆ ಜಿಲ್ಲಾ ಅಖಿಲ ಕರ್ನಾಟಕ ರವಿಚಂದ್ರನ್ ಅಭಿಮಾನಿಗಳ ಸಂಘದ ಜಿಲ್ಲಾ ಸಮಿತಿಯಿಂದ ನಟ, ನಿರ್ಮಾಪಕ ವಿ.ರವಿಚಂದ್ರನ್ ರವರ ಹುಟ್ಟು ಹಬ್ಬ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ ಆಶ್ರಮದ ತಾಯಂದಿರಿಗೆ ಕೇಕ್, ಸಿಹಿಯೂಟ ವಿತರಿಸಿ ಶ್ರೀಗಳು ಮಾತನಾಡಿದರು. ರವಿಚಂದ್ರನ್ ಜೀವನದಲ್ಲಿ ಸೋಲು ಗೆಲುವನ್ನು ಕಂಡಿದ್ದಾರೆ. ಅದಾವುದನ್ನೂ ಲೆಕ್ಕಿಸದೇ ಮುಂದೆ ತಮ್ಮ ಮಗನೊಂದಿಗೆ ಅಭಿಮಾನಿಗಳನ್ನು ಮೆಚ್ಚಿಸುವಂತಹ ಸಿನಿಮಾಗಳನ್ನು ನಿರ್ಮಿಸುತ್ತಾರೆ, ಆಗ ಮತ್ತೆ ಕನ್ನಡ ಚಿತ್ರರಂಗಕ್ಕೆ ಕಳೆ ಬರುತ್ತದೆ ಎಂದರು. ದಾವಣಗೆರೆ ಎಂದೋ ಕರ್ನಾಟಕದ ಎರಡನೇ ರಾಜಧಾನಿಯಾಗಬೇಕಿತ್ತು. ಆದರೂ ಶಿಕ್ಷಣ ಕ್ಷೇತ್ರದಲ್ಲಿ ತನ್ನ ಛಾಪನ್ನು ಮೂಡಿಸಿದೆ. ಅದರಂತೆ ಚಿತ್ರರಂಗಕ್ಕೆ ಸಂಬಂಧಿಸಿದಂತೆ ನಟ, ನಿರ್ಮಾಪಕ, ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿ ಇಲ್ಲಿನ ಸಮೀಪದ ಆನಗೋಡು ರಸ್ತೆಯಲ್ಲಿ ನಮ್ಮೆಲ್ಲರನ್ನು ಅಗಲಿದ ಚಿತ್ರನಟ ದಿ ಶಂಕರ್ ನಾಗ್ ಹೆಸರಿನಲ್ಲಿ ಎಲ್ಲ ಅಭಿಮಾನಿಗಳ ಆಶಯದಂತೆ ದಾವಣಗೆರೆಯಲ್ಲಿ ಒಂದು ಫಿಲ್ಮ್ ಸಿಟಿ ನಿರ್ಮಾಣವಾಗಬೇಕು ಎಂದು ಅವರು ಆಶಿಸಿದರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ಮಾತನಾಡಿ, ಪ್ರತಿವರ್ಷ ನಟ ರವಿಚಂದ್ರನ್ ಅವರ ಜನ್ಮದಿನವನ್ನು ಇಂತಹ ಆಶ್ರಮಗಳಲ್ಲಿ ಆಯೋಜಿಸುತ್ತಾ ಬಂದಿರುವುದು ಶ್ಲಾಘನೀಯ ಕಾರ್ಯ. ಕನ್ನಡ ಚಿತ್ರರಂಗವನ್ನು ಇನ್ನೂ ಉನ್ನತಕ್ಕೆ ಏರಿಸುವ ಮೂಲಕ ರಾಜ್ಯ, ರಾಷ್ಟ್ರಾದ್ಯಂತ ಗುರುತಿಸುವಂತೆ ಮಾಡುತ್ತಾರೆ ಎಂದರು. 35 ವರ್ಷಗಳ ಹಿಂದೆ ಇಲ್ಲಿನ ಆನಗೋಡು ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ನಿಧನರಾಗಿ ಎಲ್ಲರ ಮನದಲ್ಲಿ ಅಚ್ಚಳಿಯದೇ ಉಳಿದಿರುವ ಚಿತ್ರನಟ ದಿ ಶಂಕರ್ ನಾಗ್ ಹೆಸರಿನಲ್ಲಿ ಒಂದು ಫಿಲಂ ಸಿಟಿ ಯಾಗಬೇಕು. ಅದೂ ಈ ದಾವಣಗೆರೆಯಲ್ಲಿಯೇ ಆಗಬೇಕು. ಈ ಕುರಿತು ಮುಖ್ಯ ಮಂತ್ರಿಗಳು, ಈ ಭಾಗದ ಸಂಸದರು, ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಗಮನ ಹರಿಸಬೇಕೆಂದು ಮನವಿ ಮಾಡಿದರು. ಸಂಘದ ಜಿಲ್ಲಾಧ್ಯಕ್ಷ ಎಂ.ಮನು ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಹಿಂದ ಸಂಘಟನೆ ರಾಜ್ಯ ಉಪಾಧ್ಯಕ್ಷ ಡಿ.ಗಿರೀಶ ಹೊದಿಗೆರೆ, ಬ್ರಿಗೇಡ್ ಸಂಘಟನೆ ಚಿತ್ರದುರ್ಗ ಜಿಲ್ಲಾಧ್ಯಕ್ಷ ಪಿ.ಎಚ್.ಚಿಕ್ಕಪ್ಪ ಪೂಜಾರ್, ವಿಶ್ವ ಕರವೇ ರಾಜ್ಯ ಸಂಚಾಲಕ ಬಿ.ಇ.ದಯಾನಂದ, ಬಿ.ಆರ್.ಮಂಜುನಾಥ, ಗಣೇಶ ಚಿನ್ನಿಕಟ್ಟಿ, ದಾವಣಗೆರೆ ತಾ ಫೋಟೋಗ್ರಾಫರ್ ಸಂಘದ ಗೌರವಾಧ್ಯಕ್ಷ ಬಿ.ಮಂಜುನಾಥ, ಅಖಿಲ ಕರ್ನಾಟಕ ರವಿಚಂದ್ರನ್ ಅಭಿಮಾನಿಗಳ ಸಂಘದ ಜಿಲ್ಲಾ ಉಪಾಧ್ಯಕ್ಷ ಕೋಟ್ಯಾಳ್ ಸಿದ್ದೇಶ, ಸಂತೋಷ ದೊಡ್ಡಮನಿ,ಸುಕನ್ಯ, ಹೇಮಾ ಸುಮಾ ದೇವೇಂದ್ರಪ್ಪ ಸಂಜಯ್ ರಂಗನಾಥ್ ಶಿಲ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.