
ಮುಂಬೈ, ನವೆಂಬರ್ 26: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಇಂದು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ ಪ್ರಕ್ರಿಯೆಯಂತೆ ಇಂದು ಬೆಳಗ್ಗೆ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಅವರನ್ನು ಭೇಟಿಯಾದ ಅವರು, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿ ಮೂರು ದಿನವಾದರೂ ಸಿಎಂ ಅಭ್ಯರ್ಥಿ ಯಾರು ಎಂಬ ಕುರಿತು ಮಹಾಯುತಿ ಮೈತ್ರಿಯಲ್ಲಿ ಅಭ್ಯರ್ಥಿ ಅಧಿಕೃತವಾಗದ ಹಿನ್ನೆಲೆಯಲ್ಲಿ, ಮುಂದಿನ ಸಿಎಂ ಪ್ರಮಾಣವಚನದವರೆಗೆ ಹಂಗಾಮಿ ಸಿಎಂ ಆಗಿರುವಂತೆ ರಾಜ್ಯಪಾಲರು ಶಿಂಧೆ ಅವರಿಗೆ ಸೂಚಿಸಿದ್ದಾರೆ.
ಶಿಂಧೆ ರಾಜೀನಾಮೆ ನೀಡುವ ವೇಳೆ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ ಜೊತೆಗಿದ್ದರು. ಮಹಾರಾಷ್ಟ್ರ ವಿಧಾನಸಭೆ ಅವಧಿ ನವೆಂಬರ್ 26 ಅಂದರೆ ಇಂದಿಗೆ ಮುಗಿಯಲಿದೆ.
ರಾಜೀನಾಮೆಗೂ ಮುನ್ನ ಶಿಂಧೆ, ರಾಜ್ಯಪಾಲರೊಂದಿಗೆ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಉಗ್ರರ ವಿರುದ್ಧ ಹೋರಾಡಿ ಮಡಿದ ಹುತಾತ್ಮಕರಿಗೆ ಗೌರವ ನಮನ ಸಲ್ಲಿಸಿದರು.
ಬಿಜೆಪಿ, ಶಿಂಧೆ ನೇತೃತ್ವದ ಶಿವಸೇನೆ ಮತ್ತು ಅಜಿತ್ ಪವಾರ್ ನೇತೃತ್ವದ ಎನ್ಸಿಪಿಯ ಮಹಾಯುತಿ ಮೈತ್ರಿ ಮಹಾರಾಷ್ಟ್ರ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿದೆ. 288 ಸ್ಥಾನದಲ್ಲಿ 230 ಸ್ಥಾನಗಳನ್ನು ಮೈತ್ರಿ ಗೆದ್ದಿದೆ.