
ಬೆಳಗಾವಿ, ನವೆಂಬರ್ 13 : ಡಿಸಿಸಿ ಬ್ಯಾಂಕ್ ಮೂಲಕ ರಾಜ್ಯ ರಾಜಕಾರಣಕ್ಕೆ ಪಾದಾರ್ಪಣೆ ಮಾಡಿದ ಕಿತ್ತೂರು ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಅವರು ಡಿಸಿಸಿ ಬ್ಯಾಂಕ್ ಮೂಲಕ ರಾಜಕೀಯ ಇನ್ನಿಂಗ್ಸ್ ಪ್ರಾರಂಭಿಸಿದ್ದು, ಇದರ ಮುಂದಿನ ಹೆಜ್ಜೆಯಾಗಿ ಕಿತ್ತೂರು ಕ್ಷೇತ್ರದ ಶಾಸಕ ಸ್ಥಾನಕ್ಕೆ ಪದೋನ್ನತಿ ಪಡೆದಿದ್ದು ಇದೀಗ ಇತಿಹಾಸ. ಸದ್ಯ ಮಹಾಂತೇಶ ದೊಡ್ಡಗೌಡರ ಸಹಕಾರಿ ಕ್ಷೇತ್ರದ ಮತ್ತೊಂದು ಮಜಲಿಗೆ ಏರುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗುತ್ತಿದೆ.
ಡಿಸಿಸಿ ಒಳ ಬೇಗುದಿ ಬೆನ್ನಲ್ಲೇ ಮಾಜಿ ಅಧ್ಯಕ್ಷ ರಮೇಶ ಕತ್ತಿ ರಾಜೀನಾಮೆ ನಂತರ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು ಮಾಜಿ ಸಚಿವ ಲಕ್ಷ್ಮಣ ಸವದಿ ಅವರ ಶಿಷ್ಯ ಎಂದೇ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಮಹಾಂತೇಶ ದೊಡ್ಡಗೌಡರ ಅವರಿಗೂ ಈ ಬಾರಿಯ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗಾದಿ ಒಲಿದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.
ಬ್ಯಾಂಕಿನ ಆಡಳಿತ ಮಂಡಳಿಯ ಬಾಕಿ ಉಳಿದಿರುವ ಅವಧಿಗೆ ನೂತನ ಅಧ್ಯಕ್ಷರ ಆಯ್ಕೆಯು ಆಡಳಿತ ಮಂಡಳಿಯ ಸಭಾಭವನದಲ್ಲಿ ನಡೆಯಲಿದೆ.
ನ.13ರಂದು (ಇಂದು ) ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ನಾಮಪತ್ರ ಸಲ್ಲಿಕೆ ಮಧ್ಯಾಹ್ನ 3ರಿಂದ ನಾಮಪತ್ರ ಪರಿಶೀಲನೆ ಬಳಿಕ ಕ್ರಮಬದ್ಧ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಿದೆ.
ಹಿಂಪಡೆಯಲು ಅವಕಾಶ ನೀಡಿದ ಬಳಿಕ ಕಣದಲ್ಲಿ ಸ್ಪರ್ಧಿಗಳಿದ್ದರೇ ಚುನಾವಣೆ ಇಲ್ಲವಾದರೇ ರಿಟರ್ನಿಂಗ್ ಅಧಿಕಾರಿ ನೂತನ ಅಧ್ಯಕ್ಷರ ಘೋಷಣೆ ನಡೆಯಲಿದೆ.
ಡಿಸಿಸಿ ಅಧ್ಯಕ್ಷ ಹುದ್ದೆ ಸಚಿವ ಸ್ಥಾನಕ್ಕೆ ಸಮ*ಬೆಳಗಾವಿ ಡಿಸಿಸಿ ಬ್ಯಾಂಕ್ ರಾಜ್ಯದಲ್ಲೇ ಅತಿ ದೊಡ್ಡ ಬ್ಯಾಂಕ್ ಅನ್ನೋ ಖ್ಯಾತಿ ಹೊಂದಿದೆ. ಹೀಗಾಗಿ ಡಿಸಿಸಿ ಅಧ್ಯಕ್ಷ ಹುದ್ದೆ ಸಚಿವ ಸ್ಥಾನಕ್ಕೆ ಸಮನಾದುದು.
ಒಟ್ಟು ₹5791 ಕೋಟಿ ಠೇವಣಿ ₹5200 ಕೋಟಿ ಸಾಲ ನೀಡಿಕೆ ಈ ಬ್ಯಾಂಕಿನ ಸದ್ಯದ ದಾಖಲೆಯಾಗಿದೆ. ಒಟ್ಟು 1155 ಪಿಕೆಪಿಎಸ್ ಗಳನ್ನು ಹೊಂದಿದೆ. ಜಿಲ್ಲೆಯ 40 ಲಕ್ಷಕ್ಕೂ ಹೆಚ್ಚು ರೈತರ ಆರ್ಥಿಕತೆ ಮೇಲೆ ಈ ಬ್ಯಾಂಕ್ ನೇರ ಪರಿಣಾಮ ಬೀರುತ್ತದೆ.