
ಬೆಂಗಳೂರು: ಇಂದು ದಾಖಲೆಯ ಹದಿನಾರನೇ ಬಜೆಟ್ ಮಂಡಿಸಿರುವ ಹಣಕಾಸು ಖಾತೆಯನ್ನು ಕೂಡ ಹೊಂದಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಕನ್ನಡ ಚಿತ್ರರಂಗದ ಮತ್ತು ಕನ್ನಡ ಕಲಾಭಿಮಾನಿಗಳ ಹಲವು ವರ್ಷಗಳ ಮನವಿಗೆ ಇನ್ನೊಮ್ಮೆ ಮಣೆ ಹಾಕಿದ್ದಾರೆ.
ಇನ್ನೊಮ್ಮೆ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಮಲ್ಟಿಪ್ಲೆಕ್ಸ್ಗಳಿಗೆ ಶಾಕ್ ನೀಡಿದೆ. ನಟ್ಟು-ಬೋಲ್ಟು ಟೈಟ್ ಮಾಡುವ ಪ್ರಯತ್ನ ಮಾಡಿದೆ.
ಮಲ್ಟಿಪ್ಲೆಕ್ಸ್ಗಳಲ್ಲಿ 200 ರೂಪಾಯಿಗೆ ಸೀಮಿತಗೊಳಿಸಲಾಗುವುದು ಎಂದು ಘೋಷಿಸಿದ್ದಾರೆ.
ಇನ್ನು, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಕೇರಳಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಮಲ್ಟಿಪ್ಲೆಕ್ಸ್ ಟಿಕೆಟ್ ದರ ಗಗನಕ್ಕೇರಿತ್ತು. ಪರಭಾಷಾ ಚಿತ್ರ ಬಂದರಂತೂ ಚೆನ್ನೈ ಮತ್ತು ಹೈದರಾಬಾದ್ನಲ್ಲಿಯೇ ಇರದ ದರವನ್ನು ಇಲ್ಲಿ ಮಲ್ಟಿಪ್ಲೆಕ್ಸ್ಗಳಲ್ಲಿ ನಿಗದಿ ಮಾಡಲಾಗುತ್ತಿತ್ತು.
ಟಿಕೆಟ್ ಹೆಸರಿನಲ್ಲಿ 800 ರೂಪಾಯಿಯಿಂದ ಶುರುವಾಗಿ 1600ವರೆಗೆ ಇನ್ನೂ ಕೆಲವೊಮ್ಮೆ 3000 ರೂಪಾಯಿವರೆಗೆ ಕೂಡ ಪ್ರೇಕ್ಷಕರಿಂದ ಮಲ್ಟಿಪ್ಲೆಕ್ಸ್ನಲ್ಲಿ ವಸೂಲಿ ಮಾಡಲಾಗುತ್ತಿತ್ತು.
ಆದರೆ ಈಗ ದರವನ್ನು 200 ರೂಪಾಯಿಗೆ ಫಿಕ್ಸ್ ಮಾಡುವುದಾಗಿ ಸಿದ್ಧರಾಮಯ್ಯ ಹೇಳಿದ್ದಾರೆ.
ಈ ಹಿನ್ನೆಲೆ ಈ ಹಿಂದೆ ಅಂದರೆ 2017-18ರಲ್ಲಿ ರಾಜ್ಯ ಸರ್ಕಾರದ ಆದೇಶದ ವಿರುದ್ದ ಮಲ್ಟಿಪ್ಲೆಕ್ಸ್ಗಳು ನ್ಯಾಯಾಲಯದ ಮೆಟ್ಟಿಲನ್ನೇರಿದಂತೆ ಈ ಬಾರಿ ಕೂಡ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ ಇದೆ.
ಹೀಗಾಗಿ ಈ ಬಾರಿಯಾದರೂ ಸರ್ಕಾರದ ಈ ಘೋಷಣೆ ಜಾರಿಯಾಗುತ್ತಾ ಅಥವಾ ಘೋಷಣೆ ಕೇವಲ ಘೋಷಣೆಯಾಗಿಯೇ ಉಳಿಯುತ್ತಾ ಎನ್ನುವ ಪ್ರಶ್ನೆ ಅನೇಕರನ್ನು ಈಗ ಕಾಡುತ್ತಿದೆ.