
ಚನ್ನಮ್ಮನ ಕಿತ್ತೂರು, ನವೆಂಬರ್ 15: ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯ/ಕ್ಷೇತ್ರಸಮನ್ವಯಾಧಿಕಾರಿಗಳ ಕಾರ್ಯಾಲಯ ಕಿತ್ತೂರ ಹಾಗೂ ಸ್ಪೂರ್ತಿ ಕರಿಯರ್ ಅಕಾಡೆಮಿ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ NNMS ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ 1 ದಿನದ ಉಚಿತ ತರಬೇತಿ ಕಾರ್ಯಕ್ರಮ ಕಿತ್ತೂರದ ರಾಜಗುರು ಗುರುಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಮತ್ತು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕ್ಷೇತ್ರಶಿಕ್ಷಣಾಧಿಕಾರಿ ಸಿ.ವಾಯ್. ತುಬಾಕದ ಅವರು, ವಿದ್ಯಾರ್ಥಿಗಳು ಸತತ ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ಯಶಸ್ಸು ಗಳಿಸಬಹುದು ಎಂದು ಅಭಿಪ್ರಾಯಪಟ್ಟರು. ಈ ತರಬೇತಿಯು ವಿದ್ಯಾರ್ಥಿಗಳಿಗೆ ಸಹಕಾರಿಯಾಗಲು ಆಯೋಜನೆ ಮಾಡಲಾಗಿದೆ ಮತ್ತು ಇದರ ಲಾಭವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಎಸ್.ಬಿ.ಎಂ.ಜಿ.ಜಿ. ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಮ್.ಎನ್. ಚನ್ನಂಗಿಯವರು, ಬಾಲ್ಯದಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡುವುದರಿಂದ ಮುಂದಿನ ಜೀವನದಲ್ಲಿ ಯಶಸ್ವಿಯಾಗಲು ಹೆಚ್ಚಿನ ಅವಕಾಶವಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಕಾಶಿರಾಜ ಮತ್ತು ಸ್ಪೂರ್ತಿ ಅಕಾಡೆಮಿ ಧಾರವಾಡದ ನಿರ್ದೇಶಕರಾದ ಪ್ರದೀಪ್ ಎಸ್.ಎಮ್. ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ನೂಡಲ್ ಅಧಿಕಾರಿ ಶ್ರೀಮತಿ ಸ್ನೇಹಲ್ ಚಂ. ಪೂಜಾರಿ, ಎಮ್.ವಾಯ್. ಕಡಕೋಳ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು ಬಿ.ಆರ್.ಸಿ. ಕಿತ್ತೂರದ ಎಲ್.ಎಮ್. ಕುರಬೇಟ್, ಸುನೀತಾ ಪರಪ್ಪನ್ನವರ, ಜ್ಯೋತಿ ಕೋಟಗಿ ಹಾಗೂ ಸಿ.ಆರ್.ಪಿ.ಗಳು ಎನ್.ಎಮ್.ಎಮ್.ಎಸ್. ನೂಡಲ್ ಶಿಕ್ಷಕರು ಹಾಗೂ ಪರೀಕ್ಷೆಗೆ ಹಾಜರಾಗುವ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.