
ರಾಯಬಾಗ, ಅಕ್ಟೋಬರ್ 15: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮಂಟೂರ ಗ್ರಾಮದ ಮಹಿಳೆ ಮಲ್ಲವ್ವ ಭೀಮಪ್ಪ ಮೇಟಿ ಅವರು ಗ್ರಾಮ ಪಂಚಾಯತ ಸದಸ್ಯರಾಗಿದ್ದು ಮಕ್ಕಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗಲೆಂದು ತಮ್ಮ ಹದಿಮೂರು ಕಂತಿನ ಗೃಹಲಕ್ಷ್ಮೀ ಹಣ ಹಾಗೂ ಪಂಚಾಯ್ತಿ ಸದಸ್ಯತ್ವದ ಗೌರವಧನವನ್ನು ಸೇರಿಸಿ ಮತ್ತು ತಮ್ಮ ಮಕ್ಕಳ ಸಹಕಾರದಿಂದ ಒಂದು ಲಕ್ಷ ಐವತ್ತು ಸಾವಿರ ರೂ ಖರ್ಚು ಮಾಡಿ ಸಣ್ಣ ಪ್ರಮಾಣದ ಗ್ರಂಥಾಲಯವನ್ನು ನಿರ್ಮಿಸಿದ್ದು ಈ ಕಾಲದಲ್ಲಿ ಒಂದು ಮಾದರಿ ಕೆಲಸ. ಗೃಹಲಕ್ಷ್ಮೀ ಯೋಜನೆ ಮಹಿಳೆಯರಿಗೆ ಎಂಥ ಶಕ್ತಿ ಕೊಟ್ಟಿದೆ ಎನ್ನುವದಕ್ಕೆ ಇಂಥ ಉದಾಹರಣೆಗಳು ಸಾಕ್ಷಿಯಾಗಿವೆ.
ಮಹಿಳೆಯರಿಗೆ ನಿರ್ಣಯ ಮಾಡುವ ಶಕ್ತಿ ಬಂದರೆ ಸಮಾಜಕ್ಕೆ ಎಷ್ಟೆಲ್ಲ ಉಪಯೋಗ ಆಗಬಲ್ಲುದು ಅನ್ನೋದಕ್ಕೆ ಇದೊಂದು ಜೀವಂತ ಉದಾಹರಣೆಯಾಗಿದೆ. ಗ್ರಾಮೀಣ ಭಾಗದ ಮಕ್ಕಳಿಗೆ ಓದಲು ಗ್ರಂಥಾಲಯ ಆರಂಭಿಸುವ ಮೂಲಕ ಅನುಕೂಲ ಮಾಡಿಕೊಟ್ಟಿದ್ದು ಸ್ವಾರ್ಥವೇ ಪ್ರಧಾನವಾದ ಈ ಕಾಲದಲ್ಲಿ ಸಣ್ಣದೇನಲ್ಲ. ಈ ಕೆಲಸವನ್ನು ತುಂಬ ಮೆಚ್ಚಿಕೊಂಡು ದೆಹಲಿಯ ಸುಪ್ರೀಂ ಕೋರ್ಟ್ನ ಹಿರಿಯ ನ್ಯಾಯವಾದಿಗಳಾದ ಚಂದ್ರಕಾಂತ ಅಂಗಡಿ ಅವರು ಈ ಗ್ರಂಥಾಲಯಕ್ಕೆ ಲಡಾಯಿ ಪ್ರಕಾಶನದ ಆರು ಸಾವಿರ ಮೌಲ್ಯದ ಪುಸ್ತಕಗಳನ್ನು ಖರೀದಿಸಿ ಕೊಡುಗೆಯಾಗಿ ನೀಡಿದ್ದಾರೆ.
ಚಂದ್ರಕಾಂತ ಅವರು ಈ ರೀತಿ ಸಹಾಯ ಮಾಡುತ್ತಿರುವುದು ಇದೇ ಮೊದಲನೇ ಸಲವಲ್ಲ. ಅವರು ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಅನುಕೂಲ ಆಗುವ ಪುಸ್ತಕಗಳನ್ನು ಕೊಡಿಸಿದ ಉದಾಹರಣೆಗಳಿವೆ.
ಚಂದ್ರಕಾಂತ ಅವರ ಇಂಥಸಮಾಜಮುಖಿ ಕೆಲಸಗಳು ನಮ್ಮ ನಡುವೆ ಖಂಡಿತ ಬದಲಾವಣೆ ತರುತ್ತವೆ. ಅವರ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ.ಮಂಟೂರಿನಲ್ಲಿ ಮಲ್ಲಮ್ಮ ಅವರು ಆರಂಭಿಸಿದ ಗ್ರಂಥಾಲಯಕ್ಕೆ ನೀವೂ ಉಪಯುಕ್ತ ಪುಸ್ತಕಗಳನ್ನು ಕಳಿಸಿಕೊಡಿ. ಗ್ರಂಥಾಲಯಕ್ಕೆ ಅನುಕೂಲ ಮಾಡುವಂತೆ ಲಡಾಯಿ ಪ್ರಕಾಶನದ ಬಸೂ ಸೂಳೇಭಾವಿ ಕೋರಿದ್ದಾರೆ.